CATEGORIES

NEWSLETER


 

ಮುಖ್ಯ ಸಂದೇಶ

ನಿಮಗೆ ತಿಳಿದಿರುವ ವಿಷಯ

  • ನಾವು ಪ್ರತಿ ವರಷವು ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿಯನ್ನು ಆಚರಿಸುತ್ತೇವೆ.
  • ಬೇರೆ ಬೇರೆ ಗಾತ್ರದ ಗಣಪತಿಯ ವಿಗ್ರಹವನ್ನು ಮಣ್ಣಿನಿಂದ ಮಾಡುತ್ತೇವೆ. ಮನೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುತ್ತೇವೆ. ಅನೇಕ ವಸ್ತುಗಳ ಜೊತೆಯಲ್ಲಿ ೧೦ ದಿನಗಳವರೆಗೂ ಪೂಜೆಯನ್ನು ಮಾಡುತ್ತೇವೆ.
  • ಎಲ್ಲ ವಿಗ್ರಹಗಳನ್ನು ಒಂದೇ ದಿನ ನೀರಿನಲ್ಲಿ ಮುಳುಗಿಸುತ್ತೇವೆ ಅಥವ ೧೦ ದಿನಗಳಾದ್ಯಂತ ಮುಳುಗಿಸುತ್ತೇವೆ.
  • ಗಣಪತಿಯ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ.
  • ಗಣಪತಿ ವಿಗ್ರಹವನ್ನು ಹುಲ್ಲು, ಬಟ್ಟೆ, ಕಾಗದ, ಮರ, ಥರ್ಮಕೋಲ್, ಪ್ಲಾಸ್ಟರ್ ಆಫ್ ಪ್ಯಾರಿಸ್, ಸೆಣಬು, ಅಂಟು ವಸ್ತುಗಳು ಹಾಗೂ ಸಂಯೋಜಿತ ಬಣ್ಣಗಳಿಂದ ಮಾಡಿರುತ್ತಾರೆ.
  • ಥರ್ಮಕೋಲ್ ಪ್ರಕೃತಿಯಲ್ಲಿ ಸ್ವಯಂ ಕರಗುವುದಿಲ್ಲ.
  • ಸಂಯೋಜಿತ ಬಣ್ಣಗಳಲ್ಲಿ ಅಪಾಯಕಾರಿ ಭಾರ ಲೋಹಗಳಾದ ಕ್ರೋಮಿಯಂ, ಸೀಸ, ನಿಕಲ್, ಕ್ಯಾಡ್ಮಿಯಂ, ಸತು ಮುಂತಾದವು ಇರುತ್ತವೆ.
  • ಪ್ಲಾಸ್ಟರ್ ಆಫ್ ಪ್ಯಾರಿಸ್ಸಿನಲ್ಲಿ ಖಚಿತವಾಗಿ ಕ್ಯಾನ್ಸರ್-ಕಾರಕ ಎಂದು ತಿಳಿದುಬಂದಿರುವ ಅಸ್‌ಬೆಸ್ಟಾಸ್ ಇರುತ್ತದೆ.
  • ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಪ್ಲಾಸ್ಟಿಕ್ಕನ್ನು ನಾನಾ ರೂಪದಲ್ಲಿ ಬಳಸಿರುತ್ತಾರೆ. ಇದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದಿಲ್ಲ.
  • ಗಣಪತಿ ವಿಗ್ರಹಕ್ಕೆ ಹಚ್ಚುವ ಆಯಿಲ್ ಪೇಯಿಂಟಿನಲ್ಲಿರುವ ವಿಷ ರಾಸಾಯನಿಕಗಳು, ಗಣಪತಿ ವಿಗ್ರಹವನ್ನು ಮುಳುಗಿಸಿದಮೇಲೆ, ಅವು ನೀರಿನಲ್ಲಿ ಹಾಗೂ ಮಣ್ಣಿನಲ್ಲಿ ಬೆರೆಯುತ್ತವೆ.
  • ಈ ವಿಷಕಾರೀ ರಾಸಾಯನಿಕಗಳು, ಸಸ್ಯ-ಪ್ರಾಣಿ-ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ.
  • ನಮ್ಮ ದೇಶದಲ್ಲಿ ಗಣಪತಿಯನ್ನು ತೆರೆದ ಬಾವಿ, ಕೆರೆ, ಕುಂಟೆ, ನದಿ, ಸರೋವರ, ಸಮುದ್ರಗಳಲ್ಲಿ ಮುಳುಗಿಸುತ್ತೇವೆ.
  • ಆಗ ಇವುಗಳಲ್ಲಿ ಗಣಪತಿಯು ಕರಗಿ, ಬಣ್ಣಗಳಲ್ಲಿರುವ ವಿಷ ನೀರಿನಲ್ಲಿ ಬೆರೆಯುತ್ತದೆ.
  • ಇದೇ ವಿಷಮಯ ನೀರನ್ನು ಕುಡಿಯುವುದಕ್ಕೆ, ಬಟ್ಟೆ ಒಗೆಯುವುದಕ್ಕೆ, ಪಾತ್ರೆ ತೊಳೆಯುವುದಕ್ಕೆ, ಕೃಷಿಗೆ ಹಾಗೂ ನಾನಾ ಕೆಲಸಗಳಿಗೆ ಬಳಸುತ್ತೇವೆ.
  • ನೀರಿನಲ್ಲಿ ಕರಗಿರುವ ವಿಷವಸ್ತುಗಳು ನಿಧಾನವಾಗಿ ಮಣ್ಣಿನಲ್ಲಿ ಬೆರೆಯುತ್ತವೆ. ಈ ವಿಷವಸ್ತುಗಳು ಪರಿಸರ ಹಾಗೂ ಆರೊಗ್ಯದ ಮೇಲೆ ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ದುಷ್ಪರಿಣಾಮಗಳನ್ನು ಮಾಡುತ್ತವೆ.
  • ಮಳೆಗಾಲದ ನಂತರ ಗಣೇಶನನ್ನು ಮುಳುಗಿಸಿದಾಗ, ಗಣೇಶನ ಜೊತೆಯಲ್ಲಿ ನೀರನ್ನು ಸೇರುವ, ನೀರಿನಲ್ಲಿ ಕರಗುವ ಹಾಗೂ ಕರಗದಿರುವ ವಸ್ತುಗಳೆಲ್ಲ ನೀರಿನ ತಳದಲ್ಲಿ ಸಂಗ್ರಹವಾಗುತ್ತವೆ. ಇದು ‘ಸಸ್ಯ ಸಂವರ್ಧನೆ‘ಗೆ ಕಾರಣವಾಗುತ್ತದೆ.
  • ನೀರಿನಲ್ಲಿರುವ ವಸ್ತುಗಳು ಕೊಳೆತಾಗ ಕೆಲವು ವಸ್ತುಗಳು ತಳದಲ್ಲಿ ಸಂಗ್ರಹವಾದರೆ ಉಳಿದವು ನೀರಿನಲ್ಲಿ ಕರಗಿ ಜಲ ಸಸ್ಯ ಹಾಗೂ ಜೀವಿಗಳ ಒಡಲನ್ನು ಪ್ರವೇಶಿಸಿ ವಿವಿಧ ಭಾಗಗಳಲ್ಲಿ ಸಂಗ್ರಹವಾಗುತ್ತವೆ.
  • ಹೀಗೆ ಸಂಗ್ರಹವಾಗುವ ವಸ್ತುಗಳಲ್ಲಿ ಭಾರಲೋಹಗಳು ಮುಖ್ಯವಾದವು. ಸಸ್ಯಗಳಲ್ಲಿ ಹಾಗೂ ಜಲಚರಗಳನ್ನು ಪ್ರಾಣಿಗಳೋ ಇಲ್ಲ ಮನುಷ್ಯರೋ ತಿಂದಾಗ, ಆ ಭಾರ ಲೋಹಗಳು ತಿಂದವರ ದೇಹವನ್ನು ಸೇರಿ ವಿಷಪರಿಣಾಮವನ್ನು ಬೀರುತ್ತವೆ.

ಭೂಪಾಲಿನಲ್ಲಿ ನಡೆದ ಅಧ್ಯಯನ

Parisaraganapati

ಬೆಂಗಳೂರಿನಲ್ಲಿ ನಡೆದ ಅಧ್ಯಯನ

Parisaraganapatiಭಾರಲೋಹ-ಅನಾರೋಗ್ಯ: ಕ್ರೋಮಿಯಂ

  • ಸೀಮಿತ ಪ್ರಮಾಣದಲ್ಲಿ ದೇಹದಲ್ಲಿರುತ್ತದೆ.
  • ನೀರಿನಲ್ಲಿ ೦.೦೫ ಮಿ.ಗ್ರಾಂ/ಲೀಟರ್ (ವಿಶ್ವ ಆರೋಗ್ಯ ಸಂಸ್ಥೆ)
  • ಡಿ.ಎನ್.ಎ ಹಾನಿ: ಕ್ಯಾನ್ಸರ್ ಉದ್ಭವ.
  • ರಕ್ತಕಣ, ಯಕೃತ್ತು, ಮೂತ್ರಪಿಂಡಗಳಿಗೆ ಹಾನಿ.
  • ಚರ್ಮ ಅಲರ್ಜಿ ಹಾಗೂ ಚರ್ಮ ರೋಗಗಳು

ಭಾರಲೋಹ-ಅನಾರೋಗ್ಯ: ನಿಕಲ್

  • ಮನುಷ್ಯನ ದೇಹದಲ್ಲಿ ನಿಕಲ್ ಸಹಜವಾಗಿರುತ್ತದೆ.
  • ಗಾಳಿ ಮತ್ತು ನೀರಿನಲ್ಲಿ ನಿಕಲ್ ಅಂಶ ೦.೦೫ ಮಿ.ಗ್ರಾಂ/ಸೆಂ.ಮೀ.೩ ಮೀರಬಾರದು.
  • ಚರ್ಮ ಅಲರ್ಜಿಯನ್ನು ಉಂಟುಮಾಡುತ್ತದೆ.
  • ನಿಕಲ್ ಸಲ್ಫೈಡ್ ಕ್ಯಾನ್ಸರ್ ಕಾರಕ.

ಭಾರಲೋಹ-ಅನಾರೋಗ್ಯ: ಮ್ಯಾಂಗನೀಸ್

  • ಮನುಷ್ಯನ ದೇಹದಲ್ಲಿ ಇರುತ್ತದೆ.
  • ಮ್ಯಾಂಗನೀಸ್ ಪ್ರಮಾಣ ಮಿತಿ ಮೀರಿದಾಗ ಅದು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ.
  • ನರಕೋಶಗಳು ನಶಿಸಿ, ‘ಪಾರ್ಕಿನ್‌ಸನ್ ರೋಗವನ್ನು ಹೋಲುವ ‘ಮ್ಯಾಂಗನಿಸಂ ರೋಗ ಬರುತ್ತದೆ.

ಭಾರಲೋಹ-ಅನಾರೋಗ್ಯ: ಸೀಸ

  • ಇದು ಸಹಜವಾಗಿ ಮನುಷ್ಯನ ದೇಹದಲ್ಲಿ ಇರುವುದಿಲ್ಲ.
  • ಹೆಚ್ಚುವರಿ ಸೀಸವು ಸೀಸ ವಿಷಮತೆಗೆ ಕಾರಣವಾಗುತ್ತದೆ.
  • ಸೀಸ ವಿಷಮತೆಯಾದಾಗ ನರಗಳು, ಮೂತ್ರಪಿಂಡ, ಹೃದಯ ಹಾಗೂ ಜನನಾಂಗಗಳಿಗೆ ಶಾಶ್ವತ ಹಾನಿಯಾಗುತ್ತದೆ.

ಭಾರಲೋಹ-ಅನಾರೋಗ್ಯ: ಕ್ಯಾಡ್ಮಿಯಂ

  • ಇದು ನಮ್ಮ ದೇಹದಲ್ಲಿ ಇರುವುದಿಲ್ಲ.
  • ಕ್ಯಾಡ್ಮಿಯಂ ಮತ್ತು ಅದರ ಸಂಯುಕ್ತಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿಯೂ ವಿಷಕಾರಿ.
  • ಜಪಾನಿನಲ್ಲಿ ಗಾಳಿ, ನೀರು, ಮಣ್ಣಿನಲ್ಲಿ ಕ್ಯಾಡ್ಮಿಯಂ ಹೆಚ್ಚಾಗಿ ಇಟಾಯಿ-ಇಟಾಯಿ ರೋಗ (ಮೆತುಮೂಳೆ -ಮೂತ್ರಪಿಂಡ ವೈಫಲ್ಯ)ಬಂದಿದೆ.
  • ಕ್ಯಾನ್ಸರ್ ಕಾರಕ.

ಗಣಪತಿ ಹಬ್ಬದ ಉದ್ದೇಶ ಮಾಲೀನ್ಯವನ್ನು ಹೆಚ್ಚಿಸುವುದಲ್ಲ…

  • ಗಣಪತಿ ಪೂಜೆಯ ಹೆಸರಿನಲ್ಲಿ ನಾವು ಪರಿಸರ ಮಾಲೀನ್ಯವನ್ನು ಹೆಚ್ಚಿಸುತ್ತಿದ್ದೇವೆ ಎಂಬುದು ಸತ್ಯ.
  • ನಮ್ಮ ಸನಾತನ ಧರ್ಮದ ಎಲ್ಲ ಹಬ್ಬಗಳಂತೆ, ಗಣಪತಿ ಹಬ್ಬವೂ ಮನುಷ್ಯ-ಪ್ರಕೃತಿಯ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಪ್ರತಿನಿಧಿಸುತ್ತದೆ. ಅದರ ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ.
  • ಮನುಷ್ಯನ ದುರಾಸೆ ಹಾಗೂ ಪ್ರಕೃತಿಯ ಮೇಲೆ ಮಾಡುವ ಆಕ್ರಮಣದ ಬಗ್ಗೆ ನಮ್ಮ ಋಷಿಗಳಿಗೆ ಅರಿವಿತ್ತು. ಇದರಿಂದ ಮನುಕುಲದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿತ್ತು. ವರ್ಷದ ವಿವಿಧ ಋತುಮಾನಗಳಲ್ಲಿ ಬರುವ ಹಬ್ಬಗಳು ಮನುಷ್ಯ-ಪ್ರಕೃತಿ ಸಂಬಂಧ ಸಾಮರಸ್ಯವನ್ನು ಮತ್ತೇ ಮತ್ತೇ ಜ್ಞಾಪಿಸುತ್ತವೆ. ಅವನ ಆಧ್ಯಾತ್ಮ ಪಯಣದಲ್ಲಿ ಪೂರಕವಾಗಿರುತ್ತವೆ.

ಈ ಹಿನ್ನೆಲೆಯಲ್ಲಿ ನಾವು ಆಲೋಚಿಸಬೇಕಿದೆ…

  • ಗಣಪತಿ ಪೂಜೆಯ ಉದ್ದೇಶವೇನು?

– ಮಾಲೀನ್ಯತೆಯನ್ನುಂಟು ಮಾಡುವುದೆ? ಪರಿಸರ ವಿನಾಶವನ್ನು ಮಾಡುವುದೆ? ..ಖಂಡಿತ ಇಲ್ಲ.

  • ನಮ್ಮ ಆಚರಣೆಯ ಆಶಯ ಸರಿಯಾಗಿದೆಯೆ?

– ಸನಾತನವಾಗಿ ಬಂದ ಆಚರಣೆಗಳು, ಯಾವಾಗ ಹೇಗೆ ತಮ್ಮ ಆಶಯದಿಂದ ದೂರ ಹೋದವು..

  • ನಮ್ಮ ಸಂಪ್ರದಾಯದ ಆಶಯ, ಪ್ರಕಲ್ಪನೆ, ಆದರ್ಶಗಳೇನು?

ನೀವೇನು ಮಾಡಬಹುದು…

  • ಮಣ್ಣಿನಿಂದ ಮಾಡಿದ ಪುಟ್ಟ ವಿಗ್ರಹಗಳನ್ನು ಬಳಸಿ.
  • ಬಣ್ಣವಿಲ್ಲದ ಮೂರ್ತಿಗಳನ್ನು ಬಳಸಿ. ಆಯಿಲ್ ಪೇಯಿಂಟ್‌ನಲ್ಲಿರುವ ಭಾರಲೋಹಗಳು ಪರಿಸರಕ್ಕೆ ಮಾರಕ.
  • ನೀವು ದೊಡ್ಡ ವಿಗ್ರಹಗಳನ್ನು ಇಟ್ಟಿದ್ದರೆ, ಅವನ್ನು ನೀರಿನಲ್ಲಿ ಮುಳುಗಿಸಬೇಡಿ. ಮುಂದಿನ ವರ್ಷ ಮರುಬಳಸಿ. ಸಾಂಕೇತಿಕವಾಗಿ ಪುಟ್ಟ ಮಣ್ಣಿನ, ಬಣ್ಣವಿಲ್ಲದ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿ.
  • ಬಾವಿ, ಕೆರೆ, ಕುಂಟೆ, ನದಿಗಳಲ್ಲಿ ಬಣ್ಣ ಹಚ್ಚಿರುವ ವಿಗ್ರಹಗಳನ್ನು ಹಾಗೂ ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ಹಾಕಬೇಡಿ.
  • ಈ ಮಾಹಿತಿಯನ್ನು ಎಲ್ಲರೊಡನೆ ಹಂಚಿಕೊಳ್ಳಿ ಹಾಗೂ ಜನ ಜಾಗೃತಿಯನ್ನು ಹೆಚ್ಚಿಸಿ.